ತೌಸೀಫ್ ಅಹ್ಮದ್ (ಜನನ:೫ ಜೂನ್ ೧೯೮೭), ಮಿಸ್ಟರ್ ರೆಸ್ಕ್ಯೂಅರ್ ಎಂದೇ ಪರಿಚಯವಿರುವ ಇವರು ರಿಯಲ್ ಎಸ್ಟೇಟ್ ಬಿಸ್ನೆಸ್‌ಮ್ಯಾನ್ ಮತ್ತು ಪ್ರಾಣಿ - ಪಕ್ಷಿಪ್ರೇಮಿ . ಸಾಮಾನ್ಯ ವೇದಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮಾತುಕತೆ ನಡೆಸುವ ಮೂಲಕ ಪ್ರಾಣಿ ಕಲ್ಯಾಣ, ಪ್ರಾಣಿ ಕಾನೂನು ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಾರ್ಷಿಕ ಮಾನವ ಶಿಕ್ಷಣ ಕಾರ್ಯಕ್ರಮಗಳ ಮಾಧ್ಯಮದ ಮೂಲಕ ಶಾಲಾ ಮಕ್ಕಳ ಜೊತೆ ಸಕ್ರಿಯವಾಗಿ ಮಾತುಕತೆ ನಡೆಸುತ್ತಾರೆ, ಮಂಗಳೂರು ಮತ್ತು ಸುತ್ತಮುತ್ತಲಿನ ವಿವಿಧ ಕಾಲೇಜುಗಳಲ್ಲಿ ಯುವಕರಿಗೆ ಅತಿಥಿ ಉಪನ್ಯಾಸಗಳನ್ನು ಸಹ ಇವರು ನೀಡುತ್ತಾರೆ. == ಜನನ ಮತ್ತು ಶಿಕ್ಷಣ == ಇವರು ೫ ಜೂನ್ ೧೯೮೭ ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ ಜನಿಸಿದರು . ಇವರ ತಂದೆ ನಿವೃತ್ತ ಮೆಕ್ಯಾನಿಕಲ್ ಎಂಜಿನಿಯರ್ ರಫೀಕ್ ಅಹ್ಮದ್ ಮತ್ತು ತಾಯಿ ಅಸ್ಮಾ . ಇವರು ಮಾರ್ಕೆಟಿಂಗ್ ನಲ್ಲಿ ಎಮ್.ಬಿ.ಎ ಪದಬಿ ಮತ್ತು ಎಚ್.ಆರ್ ನಲ್ಲಿ ಪಿಜಿಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದಾರೆ . == ವೃತ್ತಿಜೀವನ == ಇವರು ೨೦೧೧ ರಿಂದ ಸುತ್ತಮುತ್ತಲಿರುವ ಪ್ರಾಣಿಗಳ ಕಲ್ಯಾಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಾಣಿಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ .ಹದ್ದುಗಳು, ಸಿವೆಟ್ಗಳು, ಅಳಿಲುಗಳು, ಗೂಬೆಗಳು ಸೇರಿದಂತೆ ವನ್ಯಜೀವಿ ಪಾರುಗಾಣಿಕಾಗಳನ್ನು ಯಶಸ್ವಿಯಾಗಿ ರಕ್ಷಿಸಿ ನೂರಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ . ಇದೆಲ್ಲವನ್ನೂ ಇವರು ಕಾನೂನಿನ ಚೌಕಟ್ಟಿನೊಳಗೆ ಹಾಗೂ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮಾಡುತ್ತಿದ್ದಾರೆ. ಇವರು ಮಂಗಳೂರಿನಲ್ಲಿ ಟೀಮ್ ಎಸಿಟಿಯ ಭಾಗವಾಗಿ ಸರ್ಕಸ್‌ಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದ್ದಾರೆ. ಸ್ಥಳೀಯ ಪೊಲೀಸ್, ಅರಣ್ಯ ಇಲಾಖೆ ಮತ್ತು ಸ್ಥಳೀಯ ಸರ್ಕಾರಿ ಪಶುವೈದ್ಯಕೀಯ ವಿಭಾಗವನ್ನು ತೊಡಗಿಸಿಕೊಂಡಿದು , ಇವರು ‘ದಿ ಗ್ರೇಟ್ ಪ್ರಭಾತ್ ಸರ್ಕಸ್’ನಲ್ಲೂ ಅನಿರೀಕ್ಷಿತ ತಪಾಸಣೆ ಮಾಡಿದ್ದಾರೆ. ಅಲ್ಲಿನ ಆನೆಗಳ ಕಾಲಿಗೆ ತೊಡಿಸಿದ ಮೊನಚಾದ ಲೋಹದ ಸರಪಳಿಗಳನ್ನು ಬೆಲ್ಟ್ ಗಳಿಂದ ಬದಲಾಯಿಸಿದಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಹಾಗೂ ಆನೆಗಳು ತಮ್ಮ ಸೊಂಡಿಲಿನಿಂದ ಕುಂಕುಮವನ್ನು ಬೀಸುವುದು ಹೀಗೆ ಕೆಲವು ಪ್ರದರ್ಶನಗಳನ್ನು ನಿಲ್ಲಿಸಲಾಯಿತು . ವಯಸ್ಸಾದ ನಾಯಿಗಳನ್ನು ಪ್ರಾಣಿಸಾಕಣೆ ಕೇಂದ್ರಕ್ಕೆ ಕಳುಹಿಸಿ ಪಕ್ಷಿ ಪಂಜರಗಳ ಗಾತ್ರಗಳನ್ನು ದೊಡ್ಡದಾಗಿ ಮಾಡಲಾಗಿದೆ. === ಯೋಜನೆಗಳು === ==== ಮ್ಯಾಜಿಕ್ ಕಾಲರ್ಸ್ ==== ರಾತ್ರಿ ವೇಳೆ ರಸ್ತೆಯಲ್ಲಿ ಬೀದಿ ನಾಯಿಗಳು ಅಪಘಾತಕ್ಕೆ ಈಡಾಗುವುದನ್ನು ತಪ್ಪಿಸಲು ಮ್ಯಾಜಿಕ್ ಕಾಲರ್ಸ್ ಯೋಜನೆ ಜಾರಿ ಮಾಡಿದ್ದಾರೆ . ರೇಡಿಯಂ ಮತ್ತು ನಿಯಾನ್ ನಂತಹ ವಸ್ತುವಿನಿಂದ ತಯಾರಿಸಿದ ಪ್ರತಿಫಲಿಸುವ ಬೆಲ್ಟ್ ಗಳನ್ನು ನಾಯಿಯ ಕುತ್ತಿಗೆಗೆ ಕಟ್ಟಲಾಗುತ್ತದೆ. ಇದುವರೆಗೂ ಸಾವಿರ ಬೀದಿನಾಯಿಗಳಿಗೆ ತೊಡಿಸಿದ್ದು ನಾಯಿಗಳು ರಾತ್ರಿ ವೇಳೆ ಅಪಘಾತದಿಂದ ಸಾಯುವ ಸನ್ನಿವೇಶ ಕಡಿಮೆಯಾಗಿದೆ. ==== ಕೃತಕ ಪಕ್ಷಿಗೂಡು ==== ಮಂಗಳೂರಿನಲ್ಲಿ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಪಿವಿಸಿ ಪೈಪ್ ಗಳಲ್ಲಿ ಮೂರು ಭಾಗಗಳನ್ನು ಮಾಡಿ ಕೃತಕ ಗೂಡುಗಳನ್ನು ತಯಾರಿಸಿದ್ದಾರೆ . ಗುಬ್ಬಚ್ಚಿಗಳು ವಿದ್ಯುತ್ ತಂತಿಗಳಲ್ಲಿ ಗೂಡುಕಟ್ಟಿ ಕರೆಂಟ್ ಹೊಡೆದು ಸಾವನ್ನಪ್ಪುವುದನ್ನು ತಡೆಗಟ್ಟಲೂ ಸಹ ಈ ಯೋಜನೆಗೆ ಚಾಲನೆ ನೀಡಿದ್ದಾರೆ . ==== ಪ್ರಾಜೆಕ್ಟ್ ಜಲ್ ==== ಈ ಯೋಜನೆಯನ್ನು ಜನವರಿ ೨೦೨೦ ರಲ್ಲಿ ಚಾಲನೆ ನೀಡಿದ್ದು , ಬೀದಿ ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರು ನೀಡಲು ಸಿಮೆಂಟ್ ನಿಂದ ಬೋಗುಣಿಗಳನ್ನು ತಯಾರಿಸಿದ್ದಾರೆ . ಪರಿಸರ ಕಾಳಜಿಯಿಂದ ಪ್ಲಾಸ್ಟಿಕ್ ಬಳಸಲಾಗಲಿಲ್ಲ . ಬೋಗುಣಿಗಳನ್ನು ಕಾರ್ಕಳ , ಉಡುಪಿ , ಮೂಡುಬಿದಿರೆ ಮತ್ತಿತರ ಪ್ರದೇಶಗಳಲ್ಲಿ ಮೊದಲನೇ ಹಂತದಲ್ಲಿ ಹಂಚಲಾಗಿತ್ತು .ಎರಡನೇ ಹಂತದಲ್ಲಿ ಬೀದಿ ದನಗಳಿಗೂ ಇಂತಹ ದೊಡ್ಡ ಬೋಗುಣಿಗಳನ್ನು ತಯಾರಿಸಲಾಗುತ್ತಿದೆ . ಈ ಬೋಗುಣಿಗಳನ್ನು ಕೆಂಪು , ಹಳದಿ ನೀಲಿ ಬಣ್ಣಗಳಿಂದ ತಯಾರಿಸಲಾಗಿದ್ದರಿಂದ ಇದನ್ನು ಮನೆಯ ಉದ್ಯಾನ, ಕಾಂಪೌಂಡ್ ಗೇಟ್ ಗಳಲ್ಲಿ , ಬಾಲ್ಕನಿಗಳಲ್ಲಿ , ರಸ್ತೆ ಬೀದಿಗಳಲ್ಲಿ ಇರಿಸಬಹುದು . == ಗೌರವಗಳು ಮತ್ತು ಪ್ರಶಸ್ತಿಗಳು == ಕರ್ನಾಟಕ ಸರಕಾರದ 'ಅರಣ್ಯ ಮಿತ್ರ ಪ್ರಶಸ್ತಿ'. ಹೈದರಬಾದಿನಲ್ಲಿ ನಡೆದ ಇಂಡಿಯಾ ಫಾರ್ ಅನಿಮಲ್ಸ್ ರಾಷ್ಟ್ರೀಯ ಸಮ್ಮೇಳನದಲ್ಲಿ 'ಬೆಸ್ಟ್ ಸ್ಟ್ರೀಟ್ ಕೇರ್ ಅಂಡ್ ರೆಸ್ಕ್ಯೂ' ಪ್ರಶಸ್ತಿ. ಮಂಗಳೂರಿನಲ್ಲಿ ನಡೆದ ಟೆಡ್ ಎಕ್ಸ್ ಟಾಕ್ ನಲ್ಲಿ 'ವಾಯ್ಸ್ ಆಫ್ ವಾಯ್ಸ್ ಲೆಸ್ ಅನಿಮಲ್ಸ್' ಪ್ರಶಸ್ತಿ . ಇಂಡಿಯನ್ ಎಕ್ಸ್ಪ್ರೆಸ್ ವತಿಯಿಂದ ನಡೆದ ೪೦ ಪರಿಸರ ಯೋಧರ ಸಮ್ಮೇಳನದಲ್ಲಿ ಗೌರವ ಪುರಸ್ಕಾರ. ಲಯನ್ಸ್ ಮತ್ತು ರೋಟರಿ ಕ್ಲಬ್ ವತಿಯಿಂದ ಗೌರವ . ಜೆಸಿಐ ಮಂಗಳೂರು ವತಿಯಿಂದ ೨೦೧೮ ರ ಔಟ್ಸ್ಯಾಂಡಿಗ್ ಯಂಗ್ ಪರ್ಸನ್ ಎಂಬ ಗೌರವ. == ಪ್ರಕಟಣೆಗಳು == ತೌಸೀಫ್ ಇವರು ಬೀದಿ ನಾಯಿಗಳ ಬದುಕಿನ ಘಟನೆಗಳನ್ನು ಆಧರಿಸಿ 'ಸ್ಟ್ರೇಯಿಂಗ್ ಅರೌಂಡ್ ಯು' ಎಂಬ ಕಾದಂಬರಿಯನ್ನು ಬರೆದಿದ್ದಾರೆ. == ಉಲ್ಲೇಖಗಳು ==